ಅದಾನಿ ಸಮೂಹದ ವಿರುದ್ಧ ಹಿಂಡೆನ್ಬರ್ಗ್ ರಿಸರ್ಚ್ ಮಾಡಿರುವ ಆರೋಪಗಳು ಮತ್ತು ಷೇರು ಮಾರುಕಟ್ಟೆ ನಿಯಮಗಳ ಉಲ್ಲಂಘನೆಯ ಬಗೆಗಿನ ತನಿಖೆಗೆ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಗಡುವು ಮುಗಿಯುವ ಕೇವಲ ಎರಡು ದಿನಗಳ ಮೊದಲು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಇನ್ನೂ ಕನಿಷ್ಠ ಆರು ತಿಂಗಳ ಕಾಲಾವಕಾಶ ಕೋರಿದೆ. ಜನವರಿ ಅಂತ್ಯದಲ್ಲಿ ಹಿಂಡೆನ್ಬರ್ಗ್ ವರದಿ ಪ್ರಕಟಣೆಯ ನಂತರ ಅದಾನಿ ಸಮೂಹದ ಷೇರುಗಳ ಬೆಲೆಯಲ್ಲಿ ತೀವ್ರ ಕುಸಿತ ಆಗಿ ಸಣ್ಣ ಷೇರುದಾರರು ಅಪಾರ ಪ್ರಮಾಣದ ನಷ್ಟ ಅನುಭವಿಸಿದರು. ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಲಿಸಿದ ಸುಪ್ರೀಂ ಕೋರ್ಟ್ ಹೂಡಿಕೆದಾರರ ನಷ್ಟದ ಹಿಂದಿನ ಕಾರಣಗಳು ಮತ್ತು ನಿಯಂತ್ರಕ ವೈಫಲ್ಯಗಳನ್ನು ತನಿಖೆ ಮಾಡಲು ತಜ್ಞರ ಸಮಿತಿಯನ್ನು ರಚಿಸಿತು. ಸೆಬಿ ಮುಖ್ಯಸ್ಥರು ಈ ಸಮಿತಿಗೆ ಅಗತ್ಯವಾದ ಎಲ್ಲ ಮಾಹಿತಿಯನ್ನೂ ಒದಗಿಸಬೇಕಿತ್ತು. ಇದಲ್ಲದೆ ನ್ಯಾಯಾಲಯವು ಸೆಬಿ ತನ್ನ ನಿಯಮಗಳ ಉಲ್ಲಂಘನೆಗೆ ಅದಾನಿ ಸಮೂಹದ ಬಗ್ಗೆ ಕೈಗೆತ್ತಿಕೊಂಡಿದ್ದ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿತು. ಅದಾನಿ ಸಮೂಹವು ಕನಿಷ್ಠ ಸಾರ್ವಜನಿಕ ಷೇರುದಾರರ ಮಾನದಂಡಗಳನ್ನು ಉಲ್ಲಂಘಿಸಿದೆಯೇ, ಸಂಬಂಧಿತ-ಪಕ್ಷದ ವಹಿವಾಟುಗಳನ್ನು ಬಹಿರಂಗಪಡಿಸಲು ವಿಫಲವಾಗಿದೆಯೇ ಮತ್ತು ಷೇರು ಬೆಲೆಗಳ ಏರಿಳಿತಕ್ಕೆ ಸ್ವತಃ ತಾನೇ ಕಾರಣವಾಗಿದೆಯೇ ಎಂದೂ ತನಿಖೆ ನಡೆಸಲು ನ್ಯಾಯಾಲಯ ಹೇಳಿತು. ಸೆಬಿ ಮತ್ತು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಎ.ಎಂ. ಸಪ್ರೆ ಅವರ ನೇತೃತ್ವದ ತಜ್ಞರ ಸಮಿತಿಗೆ ನಿಗದಿಪಡಿಸಲಾಗಿದ್ದ ಎರಡು ತಿಂಗಳ ಗಡುವು ಮೇ ೨ ರಂದು ಕೊನೆಗೊಳ್ಳುತ್ತದೆ. ಕಡೆಯ ಕ್ಷಣದಲ್ಲಿ ಸೆಬಿ ಹೆಚ್ಚಿನ ಸಮಯಕ್ಕಾಗಿ ಮನವಿ ಮಾಡಿರುವುದು ನ್ಯಾ. ಸಪ್ರೆ ಅವರ ನೇತೃತ್ವದ ತಜ್ಞರ ಸಮಿತಿಯ ಕಾರ್ಯಕಲಾಪಗಳ ಮೇಲೂ ಪ್ರಭಾವ ಬೀರುತ್ತದೆ.
ಅದಾನಿ ಸಮೂಹದ ಸುಮಾರು ಒಂದು ಡಜನ್ ವಹಿವಾಟುಗಳನ್ನು ಸೆಬಿ ಅನುಮಾನಾಸ್ಪದ ಎಂದು ತಿಳಿಸಿದೆ. ಈ ವಹಿವಾಟುಗಳಲ್ಲಿ ಅದಾನಿ ಸಮೂಹದಿಂದ ನಿಯಮಾವಳಿಗಳ ಉಲ್ಲಂಘನೆ ಮತ್ತು ಸಂಭವನೀಯ ವಂಚನೆ ನಡೆದಿರಬಹುದು ಎಂದು ಸೆಬಿ ಹೇಳಿದೆ. ಆದರೆ ಈ ವಹಿವಾಟುಗಳ ಸಂಕೀರ್ಣತೆಯ ಹಿನ್ನೆಲೆಯಲ್ಲಿ ಇವುಗಳ ಕೂಲಂಕುಷ ಪರಾಮರ್ಶೆಯು ಅಂದಾಜು ೧೫ ತಿಂಗಳುಗಳು ತೆಗೆದುಕೊಳ್ಳಲಿದ್ದು ಅದು ಇದನ್ನು ಆರು ತಿಂಗಳಲ್ಲಿ ಮುಗಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದೆ. ಒಂದು ವೃತ್ತಿಪರ ನಿಯಂತ್ರಕ ಸಂಸ್ಥೆ ನೀಡಿರುವ ತನಿಖೆಯ ಸಂಕೀರ್ಣತೆಯ ಕಾರಣವನ್ನು ಒಪ್ಪಿಕೊಂಡರೂ ಸಹ, ಅವರು ಕೇಳಿರುವ ಕಾಲಾವಕಾಶಗಳು ಒಪ್ಪತಕ್ಕದ್ದಲ್ಲ. ಈಗ ಆರು ತಿಂಗಳ ಸಮಯ ತೆಗೆದುಕೊಂಡು ನವೆಂಬರ್ ಒಳಗೆ ಸೆಬಿ ತನ್ನ ವರದಿಯನ್ನು ಸಲ್ಲಿಸಿದರೆ ಅಷ್ಟೊತ್ತಿಗೆ ಹಿಂಡೆನ್ಬರ್ಗ್ ವರದಿ ಬಂದು ೧೦ ತಿಂಗಳು ಕಳೆದಿರುತ್ತದೆ ಮತ್ತು ಅದಾನಿ ಗುಂಪಿನ ಬಗೆಗಿನ ಆರೋಪಗಳ ತನಿಖೆಯನ್ನು ಸೆಬಿ ಕೈಗೆತ್ತಿಕೊಂಡು ಎರಡು ವರ್ಷಗಳಾಗಿರುತ್ತದೆ. ತಪ್ಪು ಕಂಡುಬಂದಲ್ಲಿ ಅದನ್ನು ಬಹಿರಂಗಪಡಿಸಲು ಆರು ತಿಂಗಳ ಸಮಯ ಬೇಕಾಗಿಲ್ಲ. ಒಟ್ಟು ತನಿಖೆ ಆಗುವವರೆಗೆ ಕಾಯುವ ಬದಲು ತನಿಖೆಯ ಮಧ್ಯಂತರ ವರದಿಯನ್ನು ಸೂಕ್ತವೆಂದು ಪರಿಗಣಿಸುವ ಯಾವುದೇ ಎಚ್ಚರಿಕೆಗಳೊಂದಿಗೆ ಪ್ರಸ್ತುತಪಡಿಸಬೇಕು, ಆಗ ನ್ಯಾಯಾಲಯಗಳೂ ಮಧ್ಯಂತರ ಆದೇಶಗಳನ್ನು ಹೊರಡಿಸಬಹುದು. ಇದು ಹೂಡಿಕೆದಾರರಿಗೆ ಅಗತ್ಯ ಮಾಹಿತಿಯನ್ನು ತಿಳಿಸಿ ಅವರ ಹಿತಾಸಕ್ತಿಯನ್ನು ರಕ್ಷಿಸಿದಂತಾಗುತ್ತದೆ. ಸತ್ಯಂ ಮತ್ತು ಐಎಲ್&ಎಫ್ಎಸ್ ಹಗರಣಗಳಿಗೆ ಹೋಲಿಸಿದರೆ ಅದಾನಿ ಹಗರಣ ಭಾರತೀಯ ಷೇರು ಮಾರುಕಟ್ಟೆಯ ವಿಶ್ವಾಸಾರ್ಹತೆಯ ಮೇಲೆ ದೊಡ್ಡ ಹೊಡೆತ ನೀಡಿದೆ. ಈ ಹಿನ್ನೆಲೆಯಲ್ಲಿ ನಿಯಂತ್ರಕ ಸೆಬಿಯ ಇತ್ತೀಚಿನ ಮನವಿಯು ವಿಶ್ವಾಸ ಮೂಡಿಸುವುದಿಲ್ಲ. ಭಾರತದ ಹಣಕಾಸು ಮಾರುಕಟ್ಟೆಗಳಲ್ಲಿನ ಹೂಡಿಕೆದಾರರಿಗೆ ಇದು ಒಳ್ಳೆಯ ಸುದ್ದಿ ಅಲ್ಲ.